ಭಾರತದಲ್ಲಿ ಅಂಗವಿಕಲರ ಶಿಕ್ಷಣ

ಭಾರತದ ಪ್ರತಿಯೊಂದು ಮಗುವಿಗೂ ಅದರ ಹದಿನಾಲ್ಕನೆಯ ವಯಸ್ಸಿನ ತನಕ ತಕ್ಕುದಾದ ಶಿಕ್ಷಣವನ್ನು ಉಚಿತವಾಗಿ ಕೊಡುವುದು ಕೇಂದ್ರ ಸರ್ಕಾರದ ಮತ್ತು ರಾಜ್ಯ ಸರ್ಕಾರಗಳ ನೈತಿಕ ಹೊಣೆಗಾರಿಕೆ. 1971ರಲ್ಲಿ ರಾಷ್ಟ್ರದಲ್ಲಿ ಸುಮಾರು 14 ಕೋಟಿ 14 ವಯಸ್ಸಿಗಿಂತ ಚಿಕ್ಕ ಮಕ್ಕಳಿದ್ದರು. ಇದು ಇಂದು (1984) 17 ಕೋಟಿಗೆ ಏರಿದೆ ಎಂದು ಅಂದಾಜು ಮಾಡಲಾಗಿದ್ದು ಇದರಲ್ಲಿ ಸುಮಾರು 1ಕೋಟಿ 36 ಲಕ್ಷ ಅಂಗವಿಕಲರು ಇರಬಹುದು. ಈ ಸಂಖ್ಯೆಯಲ್ಲಿ 5 ವರ್ಷದ ಕೆಳಗಿನ ಮಕ್ಕಳೂ ಸೇರಿಕೊಂಡಿದ್ದಾರೆ.

	ಯಾವ ಅಂಗ ನ್ಯೂನತೆಯೂ ಇಲ್ಲದ ರಾಷ್ಟ್ರದ ಎಲ್ಲ ಮಕ್ಕಳಿಗೂ ಉಚಿತ ಪ್ರಾಥಮಿಕ ಶಿಕ್ಷಣ ಕೊಡಲು ಸರ್ಕಾರಗಳಿಗೆ ಇನ್ನೂ ಸಾಧ್ಯವಿಲ್ಲದಿರುವಾಗ ವಿಶೇಷ ಗಮನ ಕೊಡಬೇಕಾದ ಅಂಗವಿಕಲ ಮಕ್ಕಳಿಗೆ ಸರಿಯಾದ ಶಿಕ್ಷಣ ಕೊಡಲು ಇರುವ ತೊಡರುಗಳನ್ನು ಸುಲಭವಾಗಿ ಊಹಿಸಿಕೊಳ್ಳಬಹುದು.

	ಅಂಗವಿಕಲರನ್ನು ನಾಲ್ಕ ಗುಂಪಾಗಿ ವಿಂಗಡಿಸಬಹುದು. ಕಣ್ಣಿನ ನ್ಯೂನತೆ ಇರುವವರು. ಕಿವಿಯ ನ್ಯೂನತೆ ಇರುವವರು, ಕೈಕಾಲುಗಳ ನ್ಯೂನತೆ ಇರುವರು ಮತ್ತು ಸ್ಪಷ್ಟವಾಗಿ ಮಾತನಾಡಲಾರದವರು. ಅತಿ ಸಾಮಾನ್ಯ ದೋಷಗಳಾದ ಸಮೀಪ ದೃಷ್ಟಿ ಅಥವಾ ಅಷ್ಟೇನೂ ತೀವ್ರವಾಗಿಲ್ಲದ ಕಿವುಡಿಯರ ಮಕ್ಕಳನ್ನು ಅಂಗವಿಕಲರ ಗುಂಪಿಗೆ ಸೇರಿಸುವುದಕ್ಕಾಗುವುದಿಲ್ಲ. ಸರಿಯಾದ ಕನ್ನಡಕದ ಅಥವಾ ಸರಳವಾದ ಕಿವಿಯ ಉಪಕರಣಗಳ ಉಪಯೋಗದಿಂದ ಈ ನ್ಯೂನತೆಗಳನ್ನು ಸರಿಪಡಿಸಬಹುದು. ಆರ್ಥಿಕವಾಗಿ ಪ್ರಬುದ್ಧವಾದ ರಾಷ್ಟ್ರಗಳು ಅಂಗವಿಕಲತೆ ಏನು ಎಂಬುದನ್ನು ಸ್ಪಷ್ಟವಾಗಿ ವಿವರಿಸಿ, ಯಾರಿಗೆ ವಿಶೇಷವಾದ ಶಿಕ್ಷಣ ಮತ್ತು ಇತರ ಸೌಲಭ್ಯಗಳನ್ನು ಒದಗಿಸಬೇಕೆಂಬುದನ್ನು ನಿರ್ಧರಿಸಲು ತಕ್ಕ ವ್ಯವಸ್ಧೆ ಮಾಡಿಕೊಂಡಿವೆ. ಭಾರತದಲ್ಲಿ ಅಂಥ ವ್ಯವಸ್ಧೆ ಇಲ್ಲ. ಇದೊಂದು ದೊಡ್ಡ ಕೊರತೆ.

	ಅಂಗವಿಕಲತೆಗಳ ಪೈಕಿ ಅತ್ಯಂತ ಕ್ರೂರವಾದುದು ಕುರುಡು. ಜ್ಞಾನೇಂದ್ರಿಯಗಳಲ್ಲೆಲ್ಲ ಕಣ್ಣೇ ಪ್ರಮುಖವಾದುದು. ಬಾಹ್ಯ ಪ್ರಪಂಚದ ಬಗೆಗಿನ ಅಧಿಕ ಜ್ಞಾನ ಕಣ್ಣಿನಿಂದಲೇ ಬರುತ್ತದೆ. ಹಾಗೆಯೇ ಲೋಕ ವ್ಯವಹಾರಕ್ಕೂ ಕಣ್ಣೇ ಅತ್ಯುಪಯುಕ್ತ ಇಂದ್ರಿಯ. ಕುರುಡನಿಗೆ ಬಾಹ್ಯ ಪ್ರಪಚಂದ ಬಗ್ಗೆ ಸ್ಪಷ್ಟ ಜ್ಞಾನ ಇರುವುದೇ ಇಲ್ಲ, ಆತ ವರ್ಣಗಳ ವೈಚಿತ್ರ್ಯದಿಂದ ಸೌಂದರ್ಯದ ದಿವ್ಯಾನುಭವದಿಂದ ವಂಚಿತ. ಸಮಾಜದ ಕೆಲಸ ಕಾರ್ಯಗಳಲ್ಲಿ ಪರಿಣಾಮಕಾರಿಯಾದ ಪಾತ್ರವಹಿಸಲಾರ. ಇಂಥ ತೀವ್ರ ನ್ಯೂನತೆ ಇರುವ ಮಕ್ಕಳನ್ನು ಸ್ವಾವಲಂಬಿಗಳಾಗಿಯೂ ಆತ್ಮವಿಶ್ವಾಸವುಳ್ಳವಾರಗಿಯೂ ಮಾಡುವಂಥ ಶಿಕ್ಷಣ ಅವರಿಗೆ ದೊರೆಯಬೇಕು. ರಾಷ್ಟ್ರದಲ್ಲಿ 35 ಲಕ್ಷ ಕುರುಡು ಮಕ್ಕಳಿದ್ದಾರೆ ಎಂದು ಒಂದು ಸಮೀಕ್ಷೆ ತಿಳಿಸುತ್ತದೆ (ಇದರಲ್ಲಿ 5 ವರ್ಷಕ್ಕಿಂತ ಚಿಕ್ಕವರೂ ಸೇರಿದ್ದಾರೆ). ಇದರಲ್ಲಿ ಕಡು 2 ರಷ್ಟು ಮಕ್ಕಳಿಗೆ ಮಾತ್ರ ಸ್ವಲ್ಪ ಶಿಕ್ಷಣ ಸಿಗುತ್ತಿದೆ. ಇಡೀ ರಾಷ್ಟ್ರದಲ್ಲಿ ಕುರುಡರಿಗಾಗಿ 200 ಶಾಲೆಗಳಿವೆ.

	ಆದರೆ ಇತ್ತೀಚಿನ ವರ್ಷಗಳಲ್ಲಿ ಕುರುಡು ಮಕ್ಕಳೂ ದೃಷ್ಟಿ ಚೆನ್ನಾಗಿರುವ ಇತರ ಮಕ್ಕಳ ಜೊತೆಯಲ್ಲೇ ಬೆಳೆಯಬೇಕು ಓದಬೇಕು ಎಂಬ ಹೊಸ ವಿಚಾರ ಬೆಳೆಯುತ್ತಿದೆ. ಕುರುಡ ಮಕ್ಕಳಿಗೆ ವಿಶೇಷ ಗಮನ ಕೊಡಬೇಕಾಗಿರುವುದರಿಂದ ಅವರಿಗೆ ವಿಶೇಷ ಶಾಲೆಗಳೇ ಇರಬೇಕು. ಅವೆಲ್ಲ ವಸತಿ ಶಾಲೆಗಳೇ ಆಗಿರಬೇಕು ಎಂಬ ಭಾವನೆ ಮೊದಲಿಗೆ ಪ್ರಚಲಿತವಿತ್ತು. ಈ ಭಾವನೆಗೆ ಮತ್ತೊಂದು ಪ್ರಬಲಕಾರಣವೂ ಇತ್ತು. ಕುರುಡು ಮಕ್ಕಳು ಬೇರೆ ಮಕ್ಕಳು ಓದುವ ಪುಸ್ತಕವನ್ನು ಓದಲಾರರು. ಅವರಂತೆ ಬರೆಯಲಾರರು. ಸ್ಪರ್ಶ-ಶ್ರವಣ ಶಕ್ತಿಯನ್ನೇ ಅವಲಂಬಿಸಿರುವ ಅವರಿಗೆ ವಿಶೇಷವಾದ ಲಿಪಿಯನ್ನೇ ಕಂಡುಹಿಡಿಯಬೇಕಾಯಿತು. ಅದೇ ಬ್ರೆಲ್ ಲಿಪಿ (ನೋಡಿ- ಬ್ರೇಲ್-ಲಿಪಿ). ಹಾಗೆಯೇ ಅವರಿಗೆ ಬರೆಯಲು ವಿಶೇಷವಾದ ಉಪಕರಣಗಳಿವೆ. ಕೇವಲ ಸ್ಪರ್ಶ-ಶ್ರವಣ ಶಕ್ತಿಯ ಆಧಾರದ ಮೇಲೆ ರಚಿತವಾಗಿರುವ ಈ ಲಿಪಿ ಬೇಗ ಓದುವುದಕ್ಕಾಗಲಿ ಬರೆಯುವುದಕ್ಕಾಗಲೀ ಸಾಧ್ಯವಿಲ್ಲ. ಆದ್ದರಿಂದ ಸಾಧಾರಣ ಮಕ್ಕಳ ಜೊತೆಗೆ ಇವರನ್ನು ಕುಳ್ಳಿರಿಸಿದಾಗ ಆ ಮಕ್ಕಳಷ್ಟೇ ಬೇಗ ಇವರು ಕಲಿಯಲಾರರು. ಹೀಗಿರುವುದರಿಂದ ಕುರುಡು ಮಕ್ಕಳಿಗೆ ವಿಶೇಷಗಮನ ಕೊಡಬೇಕಾಗುತ್ತದೆ. ಓದು ಬರಹದಂತೆ ಕುರುಡು ಮಕ್ಕಳು ಸರಿಯಾಗಿ ಕಲಿಯಲು ಆಗದ ಮತ್ತೊಂದು ವಿಷಯವೆಂದರೆ ವಿಜ್ಞಾನ. ಒಂದು ಪ್ರಯೋಗವನ್ನು ವೀಕ್ಷಿಸುವುದಾಗಲೀ ಒಂದು ಪ್ರಾಣಿಯ ಅಂಗರಚನೆಯನ್ನು ಸೂಕ್ಷ್ಮದರ್ಶನದ ಮೂಲಕ ನೋಡುವುದಾಗಲೀ ಅಥವಾ ಮತ್ತಾವುದಾದರೂ ಉಪಕರಣವನ್ನು ಬೇರೆ ಮಕ್ಕಳಂತೆ ಉಪಯೋಗಿಸುವುದಕ್ಕಾಗಲೀ ಇವರಿಂದ ಸಾಧ್ಯವಾಗುವುದಿಲ್ಲ. ಆದ್ದರಿಂದ ಈ ಮಕ್ಕಳು ಇತರ ಮಕ್ಕಳು ಕಲಿಯುವುದನ್ನೆಲ್ಲ ಕಲಿಯುವುದಕ್ಕೆ ಆಗುವುದಿಲ್ಲ.

	ಜ್ಞಾನೇಂದ್ರಿಯಗಳಲ್ಲಿ ಕಣ್ಣನ್ನು ಬಿಟ್ಟರೆ ಕಿವಿಯೇ ಪ್ರಧಾನವಾದುದು. ಕಿವುಡು ತೀವ್ರವಾದಾಗ ವ್ಯಕ್ತಿಗೆ ಮಾತನಾಡುವುದಕ್ಕೆ ಸಾಧ್ಯವಾಗುವುದಿಲ್ಲ. ಅವನೇ ಕಿವುಡ ಮೂಗ. ಈ ಕೊರತೆ ಇರುವ ಮಗು ಭಾಷೆಯನ್ನು ಸರಿಯಾಗಿ ಕಲಿಯಲಾರದು. ತುಟಿಯ ಚಲನೆ ನೋಡಿ ಎಷ್ಟನ್ನು ಕಲಿಯಬಹುದೋ ಅಷ್ಟನ್ನು ಮಾತ್ರ ಆಡಲು ಕಲಿಯಬಲ್ಲದು. ಅಷ್ಟಾದರೂ ಮಾತು ಅಸ್ಪಷ್ಟವಾಗಿಯೇ ಇರುತ್ತದೆ. ಆದರೆ ಅಂಥ ಮಗು ಬರೆಯುವುದನ್ನು ಕಲಿಯಬಹುದು. ವಿಜ್ಞಾನದ ಪ್ರಯೋಗಗಳನ್ನು ನೋಡಬಲ್ಲುದು, ಮಾಡಬಲ್ಲುದು. ಆದರೆ ಭಾವನೆಗಳನ್ನು ಭಾವನಾಮಗಳನ್ನೂ ತಿಳಿದುಕೊಳ್ಳಲಾರದು. ಸಂಗೀತ ಪ್ರಪಂಚವಂತೂ ದೂರವೇ ಸರಿ. ಈ ರೀತಿಯ ಕೊರತೆ ಇರುವಾತ ಯಾವ ರೀತಿಯ ಚರ್ಚೆಯಲ್ಲಿಯೂ ಭಾಗವಹಿಸಲು ಸಾಧ್ಯವಾಗದ್ದರಿಂದ ಮತ್ತು ತನ್ನಲ್ಲಿರುವ ಭಾವನೆಗಳನ್ನು ಸ್ಪಷ್ಟವಾಗಿ ಹೇಳಲು ಆಗದ್ದರಿಂದ ಮಾತಿನ ಮೂಲಕ ಮಾತ್ರ ವಿವರಿಸಬಹುದಾದ ವಿಜ್ಞಾನ ನಿಯಮಗಳನ್ನೂ ತತ್ತ್ವಗಳನ್ನೂ ಸ್ಪಷ್ಟವಾಗಿ ಅರಿಯಲಾರ. ಸಾಧಾರಣ ಲೆಕ್ಕಗಳನ್ನು ಮಾಡಬಲ್ಲವನಾದರೂ ಗಣಿತದ ಕ್ಲಿಷ್ಟ ಭಾಗಗಳನ್ನು ಸ್ಪಷ್ಟವಾಗಿ ತಿಳದುಕೊಳ್ಳಲಾರ. ಹೀಗೆ ಕಿವುಡ ಮೂಗನಿಗೆ ಉನ್ನತ ವಿಷಯಗಳನ್ನು ಕಲಿಯಲು ಸಾಧ್ಯವಿಲ್ಲದಿದ್ದರೂ ಅವನ ಕಣ್ಣು ಕೈಕಾಲುಗಳು ಚೆನ್ನಾಗಿರುವುದರಿಂದ ಅವನು ಯಾವ ಕೈಕಸಬನ್ನಾದರೂ ಮಾಡಬಹುದು. ಯೂವುದೇ ಕಾಯಕವನ್ನು ಕೈಗೊಳ್ಳಬಹುದು. ಆದ್ದರಿಂದ ಕಿವುಡಮೂಗರ ಶಾಲೆಯಲ್ಲಿ ವೃತ್ತಿಶಿಕ್ಷಣವೇ ಪ್ರಧಾನವಾಗಿರುತ್ತದೆ. ಭಾರತದಲ್ಲಿ ಇಂದು 120 ಕಿವುಡಮೂಗರ ಶಾಲೆಗಳಿವೆ. ರಾಷ್ಟ್ರದಲ್ಲಿ ಸುಮಾರು 30 ಲಕ್ಷ ಕಿವುಡಮೂಗ ಮಕ್ಕಳಿದ್ದಾರೆ. ಇವರಲ್ಲಿ ಶೇಕಡಾ 2ರಷ್ಟು ಮಂದಿಗೆ ಮಾತ್ರ ಶಿಕ್ಷಣ ಸೌಲಭ್ಯವಿದೆ. ಕುರುಡ ಮತ್ತು ಕಿವುಡಮೂಗ ಮಕ್ಕಳಲ್ಲಿ ಶೇಕಡಾ 4ರಷ್ಟು ಮಂದಿ ಮಾತ್ರ ಶಿಕ್ಷಣ ಪಡೆಯುತ್ತಿದ್ದಾರೆ.

	ಕುರುಡ ಮೂಗ ಮಕ್ಕಳಿಗೆ ಅನೇಕವಿಧವಾದ ಅನಾನುಕೂಲತೆಗಳಿರುವುದರಿಂದ ಅವರಿಗೆ ಶಿಕ್ಷಕರು ಹೆಚ್ಚಿನ ಗಮನಕೊಡಬೇಕಾಗುತ್ತದೆ. ಅವರಿಗೆ ಪಾಠ ಹೇಳುವ ಕ್ರಮವೂ ಬೇರೆಯೇ ಆಗಿರಬೇಕಾಗುತ್ತದೆ. ಈ ಕಾರಣದಿಂದ ಆ ಶಿಕ್ಷಕರಿಗೆ ವಿಶೇಷ ರೀತಿಯ ತರಬೇತಿಯ ಆವಶ್ಯಕತೆ ಇದೆ. ಡೆಹ್ರಾಡೂನ್ ಮುಂಬಯಿಗಳಲ್ಲಿ ಕುರುಡ ಮೂಗರ ಶಿಕ್ಷಕರಿಗೆ ತರಬೇತಿ ಕೊಡುವ ಸಂಸ್ಧೆಗಳಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅಂಗವಿಕಲರಿಗೆ ಪ್ರತ್ಯೇಕ ಶಾಲೆಗಳಿರಬೇಕೆಂಬ ಭಾವನೆ ಬದಲಾಯಿಸುತ್ತಿದೆ. ಅನೇಕ ತಜ್ಞರು ಅಂಗವಿಕಲರು ತಮ್ಮ ಮನೆಯಲ್ಲಿಯೇ ಉಳಿದುಕೊಂಡು ಇತರ ಸಾಧಾರಣ ಮಕ್ಕಳು ಓದುವ ಶಾಲೆಗಳಿಗೇ ಹೋಗಿ ಅವರ ಜೊತೆಯಲ್ಲಿಯೇ ಓದಬೇಕು ಎಂದು ಹೇಳುತ್ತಿದ್ದಾರೆ. ಹೀಗೆ ಅಂಗವಿಕಲರು ಬೇರೆಯವರ ಜೊತೆಯಲ್ಲಿಯೇ ಕಲಿಯುವುದರಿಂದ ಅವರಿಗೆ ತಾವು ಸಮಾಜದಿಂದ ಬಹಿಷ್ಕøತರು ಎಂಬ ಭಾವನೆ ಬರುವುದಿಲ್ಲ. ಸಮಾಜವೂ ಅವರನ್ನು ತಿರಸ್ಕಾರ ಭಾವನೆಯಿಂದ ಕಾಣುವುದು ತಪ್ಪುತ್ತದೆ. ಆದರೆ ಹೀಗೆ ಅಂಗವಿಕಲರು ಸಾಧಾರಣ ಶಾಲೆಗಳಿಗೆ ಹೋಗುವ ವ್ಯವಸ್ಧೆಯಾದರೆ ಆ ಶಾಲಾ ಶಿಕ್ಷಕರಿಗೆ ವಿಶೇಷ ವ್ಯವಸ್ಧೆಯನ್ನು ಮಾಡಬೇಕಾಗುತ್ತದೆ. ಕೇಂದ್ರ ಸರ್ಕಾರ ಮತ್ತು ರಾಷ್ಟ್ರೀಯ ಶಿಕ್ಷಣ ಸಂಶೋಧನಾ ಸಂಸ್ಧೆ ಈ ದಿಕ್ಕಿನಲ್ಲಿ ಕೆಲಸ ಮಾಡುತ್ತಿವೆ. ಅಂಗವಿಕಲರು ಸಾಧಾರಣ ಶಾಲೆಗಳಲ್ಲಿ ಓದುವುದಕ್ಕೆ ಪ್ರೋತ್ಸಾಹ ಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರ ಅವರಿಗೆ ವಿಶೇಷ ವಿದ್ಯಾರ್ಥಿ ವೇತನಕೊಡುತ್ತಿದೆ. ಎಷ್ಟು ಜನ ಅಂಗವಿಕಲರು ಸಾಧಾರಣ ಶಾಲೆಗಳಲ್ಲಿ ಓದುತ್ತಿದ್ದಾರೆ. ಎಷ್ಟು ಮಕ್ಕಳು ವಸತಿಶಾಲೆಗಳಲ್ಲಿ ಓದುತ್ತಿದ್ದಾರೆ, ರಾಜ್ಯ ಸರ್ಕಾರಗಳು ಅಂಗವಿಕಲ ಮಕ್ಕಳ ಶಿಕ್ಷಣಕ್ಕೆ ಏನು ಮಾಡುತ್ತಿವೆ, ಮುಂದಿನ ಕಾರ್ಯಕ್ರಮ ಏನು ಎಂಬ ಯಾವ ಮಾಹಿತಿಯೂ ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದಲ್ಲಿ ದೊರೆಯುತ್ತಿಲ್ಲ. ಅದರ ವಿವರಗಳು ದೊರಕುವಂತಾಗಬೇಕು.

	ಕಿವಿ ಚೆನ್ನಾಗಿದ್ದರೂ ಮಾತನ್ನು ಸರಿಯಾಗಿ ಆಡದವರು ಅಂಗವಿಕಲರ ಮೂರನೆಯ ಗುಂಪಿಗೆ ಸೇರುತ್ತಾರೆ. ಚರ್ಚೆಗಳಲ್ಲಾಗಲೀ ದೊಡ್ಡ ದೊಡ್ಡ ಸಭೆಗಳಲ್ಲಾಗಲಿ ಇವರು ಪರಿಣಾಮಕಾರಿಯಾಗಿ ಭಾಗವಹಿಸಲಾರರು ಎಂಬುದನ್ನು ಬಿಟ್ಟರೆ ಇತರರು ಕಲಿಯಬಹುದಾದ ಎಲ್ಲಾ ವಿಷಯಗಳನ್ನೂ ಇವರು ಕಲಿಯಬಲ್ಲರು. ಇದರ ಉಚ್ಚಾರಣೆ ಸ್ಪಷ್ಟವಾಗಿಲ್ಲದಿರಬಹುದು ಅಥವಾ ಅವರ ಧ್ವನಿ ಕೀಚಲಾಗಿಯೋ ಇಲ್ಲವೇ ತುಂಬ ಕರ್ಕಶವಾಗಿಯೋ ಇರಬಹುದು. ಈ ಬಗೆಯ ದೋಷವನ್ನು ತಜ್ಞರು ತಕ್ಕ ಮಟ್ಟಿಗೆ ಪರಿಹರಿಸಬಲ್ಲರು. ಉಗ್ಗು ಈ ಬಗ್ಗೆಯ ಮತ್ತೊಂದು ದೋಷ. ಇದೊಂದು ಮಾನಸಿಕ ರೋಗ. ಇಂಥ ವ್ಯಕ್ತಿಯ ಆತ್ಮವಿಶ್ವಾಸವನ್ನು ಬೆಳೆಸುವುದರಿಂದ ಈ ದೋಷವನ್ನು ನಿವಾರಿಸಬಹುದೆಂದು ತಜ್ಞರು ಹೇಳುತ್ತಾರೆ. ಕೆಲವೊಮ್ಮೆ ಉಗ್ಗು ಸ್ವಾಭಾವಿಕ ದೋಷವಾಗಿರದೆ ಅಭ್ಯಾಸದ ಪರಿಣಾಮವಾಗಿರಬಹುದು. ಈ ದುರಭ್ಯಾಸವನ್ನು ತಪ್ಪಿಸಲು ಸಾಧ್ಯ. ಈ ದೃಷ್ಟಿಯಿಂದ ಇದು ತೀವ್ರ ಸ್ವಭಾವದ ಕೊರತೆಯಲ್ಲ.

	ಅಂಗವಿಕಲತೆಯಲ್ಲಿ ಹೆಳವು ನಾಲ್ಕನೆಯ ಬಗೆಯದು. ಈ ಕೊರತೆಯಿರುವ ಮಕ್ಕಳೂ ಧ್ವನಿ ದೋಷವಿರುವ ಮಕ್ಕಳಂತೆ ಎಲ್ಲ ವಿಷಯಗಳನ್ನು ಕಲಿಯಬಲ್ಲರು. ಇವರ ಹಸ್ತವು ಸಾಧಾರಣ ಮಕ್ಕಳ ಹಸ್ತದಂತೆ ಸರಿಯಾಗಿ ಬೆಳೆಯದಿದ್ದರೂ ಒಳ್ಳೆಯ ಚಿತ್ರಗಳನ್ನು ಬರೆಯಲು ಸಾಧ್ಯ ಎಂಬುದನ್ನು ಮಂಡ್ಯ ಜಿಲ್ಲೆಯ ಮೇಲು ಕೋಟೆ ಕರುಣಾಗೃಹದಲ್ಲಿ ನಡೆದ ಪ್ರಯೋಗ ತೋರಿಸಿಕೊಟ್ಟಿದೆ. ಈ ಬಗೆಯ ಅಂಗವಿಕಲರು ಕೆಲವಾದರೂ ವೃತ್ತಿಗಳನ್ನು ಕಲಿಯಬಹುದು. ಆದ್ದರಿಂದ ಈ ಮಕ್ಕಳು ಸಾಧಾರಣ ಶಾಲೆಗಳಲ್ಲಿ ಓದುವುದು ಸಾಧ್ಯವಾಗುತ್ತದೆ. ಅದು ಅಪೇಕ್ಷಣೀಯವೂ ಆಗಿದೆ.

	ಶೈಕ್ಷಣಿಕ ದೃಷ್ಟಿಯಿಂದ ಮಾನಸಿಕ ಬೆಳೆವಣಿಗೆ ಸರಿಯಾಗಿಲ್ಲದ ಮಕ್ಕಳನ್ನೂ ಅಂಗವಿಕಲರ ಗುಂಪಿಗೆ ಸೇರಿಸುತ್ತಿದ್ದಾರೆ. ಆದರೆ ಅವರ ಶಿಕ್ಷಣ ಇಲ್ಲಿ ಪ್ರಸ್ತಾವಿಸಿರುವ ವಿಷಯಕ್ಕೆ ಹೊರತಾಗಿದೆ.						
(ಎಸ್.ಎಚ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ